ಕಾದು ನೋಡುವ ತಂತ್ರ ಅನುಸರಿಸಿದ್ದ ಕಮಲ ಕಲಿಗಳು
ನಿಗಮ ಮಂಡಳಿಗೆ ನೇಮಕವಾದವರಲ್ಲಿ ಹಿರಿಯ ಶಾಸಕರಾದ ಅರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ನರಸಿಂಹ ನಾಯಕ್(ರಾಜೂಗೌಡ), ಎ.ಎಸ್.ಪಾಟೀಲ್ ನಡಹಳ್ಳಿ, ಶಿವನಗೌಡ ನಾಯಕ್, ಸಿದ್ದು ಸವದಿ, ನೆಹರೂ ಓಲೇಕಾರ್, ದುರ್ಯೋಧನ ಐಹೊಳೆ, ಡಾ.ಶಿವರಾಜ ಪಾಟೀಲ್ ಮತ್ತಿತರರು ಇದ್ದಾರೆ. ಈ ಎಲ್ಲ ಶಾಸಕರು ಒಂದಲ್ಲ ಒಂದು ಸಂದರ್ಭದಲ್ಲಿ ಮಂತ್ರಿ ಸ್ಥಾನದ ಆಸೆ ತೋಡಿಕೊಂಡಿದ್ದರು. ಇಂತಹ ಆಸೆಯಿರುವಾಗ ದಿಢೀರ್ ನಿಗಮ ಮಂಡಳಿಗೆ ನೇಮಕ ಮಾಡಿದ್ದರಿಂದ ಶಾಸಕರಿಗೆ ಬೇಸರವಾಗಿತ್ತು. ಇದರ ಪ್ರತಿಭಟನಾ ಸೂಚಕವಾಗಿ ಕಾಯ್ದು ನೋಡುವ ತಂತ್ರಕ್ಕೂ ಶರಣಾಗಿದ್ದರು.
ಶಾಸಕರಿಗೆ ಸಿಎಂ ಕಿವಿಮಾತು
ಇದರ ಮಧ್ಯೆ ತಮ್ಮನ್ನು ಭೇಟಿಯಾಗಿದ್ದ ಕೆಲವು ಶಾಸಕರಿಗೆ ಅನಗತ್ಯ ಗೊಂದಲ ಮೂಡಿಸುವುದು ಬೇಡ. ವಿಶಿಷ್ಟ ಪರಿಸ್ಥಿತಿಯಲ್ಲಿ ಸರಕಾರ ರಚನೆಯಾಗಿದೆ. ಕೋವಿಡ್ನಂತಹ ಸಂಕಟವೂ ಇದೆ. ಎಲ್ಲರನ್ನೂ ಮಂತ್ರಿ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಹೈಕಮಾಂಡ್ ತೀರ್ಮಾನಿಸಬೇಕಾಗುತ್ತದೆ. ಸದ್ಯಕ್ಕೆ ನಿಗಮ ಮಂಡಳಿ ಮೂಲಕ ಅಧಿಕಾರ ನೀಡಲಾಗಿದೆ. ಇದನ್ನು ತಪ್ಪಿಸಿಕೊಳ್ಳಬೇಡಿ. ದೊರೆತ ಅವಕಾಶ ಬಳಸಿಕೊಂಡು ಸರಕಾರ ಮತ್ತು ಪಕ್ಷಕ್ಕೆ ಒಳ್ಳೆಯ ಹೆಸರು ತರುವ ಕೆಲಸ ಮಾಡುವಂತೆ ಸಿಎಂ ಕಿವಿಮಾತು ಹೇಳಿದ್ದರು. ಇದಾದ ಬಳಿಕ ಹರತಾಳು ಹಾಲಪ್ಪ, ಮಾಡಾಳು ವಿರೂಪಾಕ್ಷಪ್ಪ, ದತ್ತಾತ್ರೇಯ ಪಾಟೀಲ್ ರೇವೂರ್, ಎಸ್.ವಿ.ರಾಮಚಂದ್ರ ನಿಗಮ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ಪ್ರವಾಹದಿಂದ ಅಧಿಕಾರ ಸ್ವೀಕಾರಕ್ಕೆ ಹಿನ್ನಡೆ
ಈ ನಡುವೆ ಪ್ರವಾಹ ಪರಿಸ್ಥಿತಿ ತಲೆದೋರಿದ್ದರಿಂದ ಶಾಸಕರು ನಿಗಮ ಮಂಡಳಿ ಅಧಿಕಾರ ವಹಿಸಿಕೊಳ್ಳುವ ಪ್ರಕ್ರಿಯೆಗೆ ಹಿನ್ನಡೆಯಾಯಿತು. ಯಾಕೆಂದರೆ ಶಾಸಕರು ಈ ಅಧಿಕಾರ ವಹಿಸಿಕೊಳ್ಳುವಾಗ ಸಂಬಂಧಿಸಿದ ಇಲಾಖೆ ಸಚಿವರು ಉಪಸ್ಥಿತರಿರುವುದು ರೂಢಿ. ಸಚಿವರು ತಮ್ಮ ಉಸ್ತುವಾರಿ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿದ್ದರಿಂದ ಬೆಂಗಳೂರಿಗೆ ಬರಲಿಲ್ಲ. ಇನ್ನು ಪ್ರವಾಹದ ಕಾರಣದಿಂದ ಶಾಸಕರೂ ಕ್ಷೇತ್ರ ಪ್ರವಾಸದಲ್ಲಿದ್ದರು. ಹಾಗಾಗಿ ಶಾಸಕರು ನಿಗಮ ಮಂಡಳಿ ಕುರ್ಚಿಯಲ್ಲಿ ಕುಳಿತುಕೊಳ್ಳುವ ವಿಚಾರದಲ್ಲಿ ವಿಳಂಬವಾಯಿತು. ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷರಾಗಿ ಮುದ್ದೇಬಿಹಾಳದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಗುರುವಾರ ಅಧಿಕಾರ ವಹಿಸಿಕೊಂಡರು. ಈ ವೇಳೆ ಡಿಸಿಎಂ ಲಕ್ಷತ್ರ್ಮಣ ಸವದಿ, ಆಹಾರ ಸಚಿವ ಗೋಪಾಲಯ್ಯ ಜತೆಗಿದ್ದರು. ಗೃಹ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಅರಗ ಜ್ಞಾನೇಂದ್ರ ಶುಕ್ರವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
Comments
Post a Comment